ಕುದುರೆಮುಖ -ನೋವಿನಲ್ಲಿ ಜಯಿಸಿದ ಚಾರಣ

ಮನುಷ್ಯನ ಆಸೆಗಳಿಗೆ ಮಿತಿ ಇಲ್ಲಾ. ಬರೆಯಲು ಕುಳಿತರೆ ಪದಗಳಿಗೆ ಅರಿವೇ ಇಲ್ಲಾ. ಆಸೆಗಳು ಕೆಲವೊಮ್ಮೆ ನಮ್ಮನ್ನು ದಾಟಿ ಮಿತಿ ಮೀರಿ ಬೆಳೆಯುತ್ತವೆ. ಆದರೂ ಅದರ ಅರಿವೇ ನಮಗಿರಲ್ಲಾ. ಕೆಲವೊಂದು ಆಸೆಗಳು ಸುಖದಿಂದಾದರೇ, ಕೆಲವು ಸುಖವನ್ನು ಪಡೆಯುವ ಸಲುವಾಗಿ. ಇನ್ನೂ ಕೆಲವು ದುಃಖದಿಂದ  ದೂರ ಹೋಗಲು ನಾವು ಪ್ರಾರಂಬಿಸುವ ಹುಚ್ಚುತನದಿಂದಾಗಿರುತ್ತದೆ. ಅಂತಹ ಹುಚ್ಚು ನನ್ನ ಆವರಿಸಿದ್ದು ವಿಪರ್ಯಾಸವೇ ಬಿಡಿ. ನಿಸರ್ಗದ ಮಡಿಲಲಿ ತೇಲಿ ಬಿಡುವ ಹುಚ್ಚು. ನೋವಿನಲೂ ಗುರಿಯನ್ನು ತಲುಪುವ ಹುಚ್ಚು. ಎತ್ತರ ಹೋದಷ್ಟೂ ಈ ಜಗವನ್ನೇ ಗೆಲ್ಲುತ್ತಿರುವ ಭ್ರಾಂತಿಯಲ್ಲಿ ನಮ್ಮನ್ನು ನಾವೇ ಮರೆಯುವ ಹುಚ್ಚು. ಇಂತಹ ಹುಚ್ಚಿನಲ್ಲೇ ಪ್ರಾರಂಭವಾಗಿದ್ದು ಕುದುರೆಮುಖ ಚಾರಣ. ಪ್ರತಿಯೊಂದು ಹೆಜ್ಜೆಯಲೂ ನೋವಿತ್ತು. ಅದು ನನ್ನ ಜೀವನ ಬಂದ ದಾರಿಯನ್ನೇ ಬಿಂಬಿಸಿತ್ತು. ಅದ್ಯಾಕೋ ಯಾವುದೇ ಕ್ಷಣದಲ್ಲಿ ನಮ್ಮನ್ನು ಹುಲಿಯೊಂದು ಎದುರುಗೊಳ್ಳಬಹುದು ಎಂಬ ಆಲೋಚನೆ ಮನಸ್ಸಿನಲ್ಲಿ ಓಡಾಡುತ್ತಿತ್ತು.  ಆದರೂ ಯಾವ ಭಯದ ಮುನ್ಸೂಚನೆಯೂ ಅಲ್ಲಿ ಇರಲಿಲ್ಲ. ಹೇಳಲು ಹೋರಟರೆ ಇದು ನೋವಿನಲ್ಲಿ ಜಯಿಸಿದ ಚಾರಣ.


ಕುದುರೆಮುಖ ವನ್ಯ ಮೃಗ ರಾಷ್ಟ್ರೀಯ ಉಧ್ಯಾನವನ ಚಿಕ್ಕಮಂಗಳೂರಿನ ಮೂಡಿಗೆರೆ ತಾಲೂಕಿಗೆ ಸೇರಿದ್ದು. ಚಾರಣದಲ್ಲಿ ತೊಡಗಿಕೊಂಡವರಿಗೆ ಇದು ಸ್ವರ್ಗವೇ ಅನ್ನ ಬೇಕು . ಶಾಲಾದಿನಗಳಲ್ಲಿ ಶೃಂಗೇರಿ, ಹೊರನಾಡು ಹೋಗಿದ್ದ ನಾನು ಕುದುರೆಮುಖ ನೋಡದೆ ಬಂದದ್ದು ಅದರ ಬಗ್ಗೆ ಆಸಕ್ತಿಯನ್ನು ಉಂಟು ಮಾಡಿಸಿತ್ತು.

ದೂದ್ ಸಾಗರ ಹೋಗಿ ಹೆಚ್ಚು ಕಡಿಮೆ ಕಾಲು ಮುರಿದುಕೊಂಡಿದ್ದ ನಾನು ಚಾರಣ ತಂಟೆನೇ ಹೋಗಬಾರದೆಂದಿದ್ದೆ. ಆದರೆ ನನ್ನ ಆತ್ಮೀಯ ಗೆಳೆಯ ಅನಿಲ ಕುದುರೆಮುಖ ಮಾತೆತ್ತಿದಾಗ ನೋವು ಕಡಿಮೆ ಆಗಿದೆ ಎಂಬ ಆತ್ಮ ವಿಶ್ವಾಸದಿಂದ ಹೂಂಗುಟ್ಟಿದ್ದೆ. ಕುದ್ರೆಮುಖದಲ್ಲಿ  ವಿಸ್ತಾರಗೊಳ್ಳುತ್ತಿರುವ ರಾಷ್ಟ್ರೀಯ ಉಧ್ಯಾನವನದಲ್ಲಿ ಮುಂದೆ ಚಾರಣಕ್ಕೆ ಅನುಮತಿ ಸಿಗುವುದು ಕಷ್ಟವಾಗಬಹುದು ಎಂಬ ಆತಂಕವೂ ಇನ್ನೊಂದು ಕಾರಣವಾಗಿತ್ತು. ಅನಿಲನ ಬಗ್ಗೆ ಹೇಳಬೇಕಾದರೆ  ಆವ ಸ್ವಲ್ಪ ಗಡಿ ಬಿಡಿ ಮನುಷ್ಯ. ಬಿಸಿರಕ್ತ ಬೇರೆ. ಯಾರ ಮಾತನ್ನೂ ಕೇಳಲ್ಲಾ. ಹೃದಯದಿಂದ ತುಂಬಾ ಒಳ್ಳೆಯವನಾಗಿರೋದ್ರಿಂದ ನಮ್ಮ ಗೆಳೆತನ ತುಸು ಗಟ್ಟಿಯೇ. ಇಷ್ಟೆಲ್ಲಾ ಯಾಕೆ ಪೀಠಿಕೆ ಅಂದ್ರೆ ಇವ ಮಾಡಿದ ಅವಾಂತರ ಅಷ್ಟಿಷ್ಟಲ್ಲಾ.

    ನಾನಾಗಲೇ ಹೊಸ ಗೂಡನ್ನು ಸೇರಿದ್ದರಿಂದ ಕಲಿಯುವುದರಲ್ಲೇ ಮಗ್ನನಾಗಿದ್ದೆ. ಎಲ್ಲಾ ಜವಾಬ್ಧಾರಿ ಅನಿಲನ ತಲೆ ಮೇಲೆ ಇತ್ತು. ಹೆಚ್ಚಿನ ಗೆಳೆಯರು ಧಾಂಪತ್ಯ ಜೀವನ ಸೇರಿದ್ದರಿಂದ ಜನರನ್ನು ಒಂದುಗೂಡಿಸುವ ಕಾರ್ಯದಲ್ಲಿ ನಾನು ವಿಫಲನಾಗಿದ್ದೆ. ಕೊನೆಗೂ ಆ ದಿನ ಬಂದೆ ಬಿಟ್ಟಿತು.

ಬೆಂಗಳೂರು - ಕಳಸ : ಇದು ಒಂದು ಅನುಭವ

ಕಳಸ ಹೋಗುವ ಟಿಕೇಟು ಸಿಗುವುದು ಕಷ್ಟ ಎಂದು ಅನಿಲನಿಗೆ ಮುಂಚೆಯೇ ಹೇಳಿದ್ದೆ, ಮುಂಗಡವಾಗಿ ಟಿಕೇಟು ಕಾಯ್ದೀರಿಸುವುದು ಒಳ್ಳೆಯದು ಎಂದು ಒತ್ತಿ ಒತ್ತಿ ಹೇಳಿದ್ದೆ. ಆದರೂ ಆಸಾಮಿ ಟಿಕೇಟು ಮಾಡಿರಲಿಲ್ಲ. ನಾನು ಹೋದಾಗ ೯:೩೦ ಕ್ಕೆ ಬಸ್ ಸ್ಟಾಂಡಿನಲ್ಲಿ ಟಿಕೇಟಿಗಾಗಿ ಮುಂಗಡ ಕಾಯ್ಡಿರಿಸುವ ಸ್ಥಳದಲ್ಲಿ ತಿಣುಕಾಡುತ್ತಿದ್ದ. ಅವನ ಗೆಳೆಯ ಆದರ್ಶ ಕೂಡ ಅಲ್ಲೇ ಇದ್ದ. ಚೇತನ್, ಅಬ್ದುಲ್ಲ ಇನ್ನೂ ಬರುವುದರಲ್ಲೇ ಇದ್ದರು. ಆಫೀಸ್ ಇಂದ ಮನೆಗೆ ಹೋಗಿ ಲಗೇಜು ತರುವುದರಲ್ಲೇ ಸುಸ್ತಾಗಿದ್ದ ನಾನು ಸ್ವಲ್ಪ ಆ ಕಡೆ ಈ ಕಡೆ ತಿರುಗಾಡಿದೆ. ಖಾಸಗಿ ಬಸ್ ಏನಾದರೂ ಇದೆ ಅಂತ ನೋಡಿದೆ.  ಯಾವಾಗಲೂ ಕಾಲು ಹಿಡಿದು ಬರ್ತೀರಾ ಅಂತ ಕೇಳುತ್ತಿದ್ದ ಏಜೆಂಟರ ಸುದ್ದಿನೂ ಇಲ್ಲಾಗಿತ್ತು. ಅನಿಲ ಹೇಳಿದ್ದ ಐರಾವತ ಬಸ್ಸಲ್ಲಿ ಒಂದು ಜಾಗ ಕಾಲಿ ಇದೆ ಎಂದು.  ಮೊದಲೇ ಹೇಳಿದ್ದೆ ಅನಿಲನಿಗೆ ಸ್ವಲ್ಪ ಗಡಿಬಿಡಿ ಜಾಸ್ತಿ ಎಂದು.  ರಾಜಹಂಸದಲ್ಲಿ ಟಿಕೇಟು ಬಗ್ಗೆ  ಕೇಳಿದ್ನೋ ಇಲ್ಲ ಗೊತ್ತಿಲ್ಲ. ನಾನು ಕಂಡಕ್ಟರ್ ಹತ್ತಿರ ಹೋದಾಗ ಸ್ವಲ್ಪ ಮೃದುವಾಗಿ ಕೇಳಿದೆ.  ಯಾವಾಗಲೂ ಹೊರಗಡೆ ಬೆಳೆದಿರುವ ನಂಗೆ ಈ ರೀತಿಯ ಪರಿಸ್ತಿತಿ ನಿಬಾಯಿಸುವುದು ಕಷ್ಟ ಏನೂ ಆಗಿರಲಿಲ್ಲ. ಟಿಕೆಟ್ ಇಲ್ಲ ಅಂದಿದ್ದ ಕಂಡಕ್ಟರ್ ಕೊನೆಗೆ ಅಲ್ಲಿ ಇಲ್ಲಿ ನೋಡಿ ನಾಲ್ಕು ಸೀಟ್ ಕೊಟ್ಟಿದ್ದ. ಇನ್ನು ಐದನೆಯವ ನಾನು ಎಲ್ಲಿ ಹೋಗೋದು. ನಾನು ಡ್ರೈವರ್ ಪಕ್ಕದಲ್ಲಿ ಇರುವ ಕಂಡಕ್ಟರ್ ಸೀಟಲ್ಲಿ ಕುಳಿತುಕೊಳ್ಳೋದು ಅಂತ ಅಯಿತು. ಬೆನ್ನು ನೋವು ಬರುವುದಂತೂ ತಪ್ಪಿದ್ದಲ್ಲ. ಇಡಿ ರಾತ್ರಿ ಜಾಗರಣೆ. ಕಂಡಕ್ಟರ್ ಡ್ರೈವರ್ ಹಿಂದಿನ ಮಲಗುವ ಸೀಟಿನಲ್ಲಿ ಕುಳಿತಿದ್ದ. ನಮಗೆ ಇಷ್ಟೆಲ್ಲ ಮಾಡಲು ಅವನ ಕೈ ಬಿಸಿ ಕೂಡ ಮಾಡಿದ್ದೆವು. ಇದಕ್ಕಿಂತ ಬೇರೆ ಏನೂ ಉಪಾಯ ನನಗೆ ಹೊಳೆಯಲಿಲ್ಲ. ರಾತ್ರಿ ಇಡಿ ಏನು ಮಾಡಬೇಕು. ನಂಗೂ ತುಂಬಾ ಪ್ರಶ್ನೆಗಳು. ಜನರ ಜೀವನ ಶೈಲಿಯಿಂದ ಹಿಡಿದು ಪ್ರಸಿದ್ದ ತಾಣಗಳ ಬಗ್ಗೆ ಪ್ರಶ್ನೆ ಕೇಳುತ್ತ ಅವರಿಗೆ  ಸ್ವಲ್ಪ ಜಾಸ್ತಿನೇ ತಲೆ ತಿಂದಿದ್ದೆ.


ಕಳಸದಲ್ಲಿ ಕಾಣುವ ದಿಕ್ಸೂಚಿ ಫಲಕ 

ಕಳಸ ತಲುಪಿದಾಗ ೬:೪೦ ಆಗಿತ್ತು. ನಮಗೆ  ಬಾಳೆಗಲ್  ಹೋಗ ಬೇಕಿತ್ತು. ೬:೩೦ ರ ಬಸ್  ಹೊಗಿತ್ತು.  ಇನ್ನು ೮ ಮತ್ತು ೯ ರ ಬಸ್ ಕಾಯುವಷ್ಟು  ಸಮಯ ಇರಲಿಲ್ಲ. ಆಟೋ ೫೦ ರೂಪಾಯಿಗೆ ನಿಕ್ಕಿ ಮಾಡಿ  ಬಾಳೆಗಲ್  ತಲುಪಿದಾಗ ಅನಿಲ ಕರೆ ಮಾಡಿ ಹೇಳಿದ್ದ ಜೀಪ್ ಇರಲಿಲ್ಲ. ಅಲ್ಲೇ ಒಂದು ಕ್ಯಾಂಟೀನ್ ಅಲ್ಲಿ ಟೀ ಕುಡಿದು ಅರುಣನಿಗೆ ಕರೆ ಮಾಡಿದೆವು. ಅರುಣ ಈ ಚಾರಣಕ್ಕೆ ಮಾರ್ಗದರ್ಶಕ.

ಜೈನ ಕ್ಯಾಂಟೀನ್ ಬಾಳೆಗಲ್ 

ಟೀ ಕಾಫೀ ಕುರುಂ ಕುರುಂ ಕುರುಂ ಅಂಗಡಿ 
ಏನಾದರೂ ಚಿಪ್ಸ್ ಬಿಸ್ಕೆಟ್ ತೆಗೆದು ಕೊಳ್ಳೋದಾದರೆ ಇಲ್ಲೇ ತೆಗೆದು ಕೊಳ್ಳಿ. ಮುಂದೆ ಏನೂ ಸಿಗದು.
ಹನುಮ ಗುಂಡಿ ಮತ್ತು ಗಂಗಾ ಮೂಲ ದಾರಿ. (ಮಂಗಳೂರು ದಾರಿ )

ಇನ್ನೊಂದು ಜೀಪ್ ಹತ್ತಿ ನಾವು ತಂಗಬೇಕಾದ ಮನೆ ತಲುಪಿದಾಗ ನಮಗೆ ಸುಸ್ತಾಗಿತ್ತು. ಆ ಮಣ್ಣಿನ ರಸ್ತೆಯ ಅವಸ್ತೆ ಹೇಳಲು ತೀರದು.  ನೀವೇನಾದರೂ ನಿಮ್ಮ ಕಾರು ತೆದೆದುಕೊಂಡು ಬಂದ್ರೆ ಇಲ್ಲಿ ತರಲು ಆಗದು. ಆದರೆ ಜೀಪಿನವ ಅಲ್ಲೇ ಎಲ್ಲಾದರು ಇಡಲು ವ್ಯವಸ್ತೆ ಮಾಡಬಲ್ಲ.

 ಅರುಣನ ಮನೆಗೆ ದಾರಿ(ಇಲ್ಲೇ ಅರಣ್ಯ ಶುರುವಾಗುವುದು )
ಆದರ್ಶ್, ಅನಿಲ, ಚೇತನ್, ಅಬ್ದುಲ್ಲ

ಅರುಣನ ಮನೆಯಲ್ಲೇ ನಾವು ತಂಗಿದ್ದು  . ಅರುಣನಂತೆ ೨, ೩ ಮನೆಗಳು ಇಲ್ಲಿ ಚಾರಣಕ್ಕೆ ವಸತಿ ವ್ಯವಸ್ತೆ ಮಾಡಬಲ್ಲರು. ಅರುಣ ಅರಣ್ಯದ ಪಹರೆಧಾರನಾಗಿಯೂ ಕೆಲಸ ಮಾಡುತ್ತಾನೆ. ಇಲ್ಲೇ ಒಂದು ಆಣೆಕಟ್ಟನ್ನು ಕಟ್ಟುವ ಕೆಲಸ ಪ್ರಾರಂಬವಾಗಿದೆ. ಅಲ್ಲಿ ಕೂಡ ಕೆಲ ಸ್ಥಳೀಯ ಜನರಿಗೆ ಕೆಲಸವನ್ನೂ ನೀಡಲಾಗಿದೆ.

ಅರುಣನ ಮನೆ ಮುಂದೆ ಪಹರೆಧಾರರಿಬ್ಬರು 


ಅರುಣನ ಮನೆಯ ಒಂದು ಚಿಕ್ಕ ಕೋಣೆಯಲ್ಲಿ ನಮಗೆ  ಉಳಿಯಲು ವ್ಯವಸ್ತೆಯಾಗಿತ್ತು. ಕೊಣೆ ಚೊಕ್ಕವಾಗಿತ್ತು. ಅಲ್ಲೇ ಲಗೇಜು ಇಟ್ಟು ಬೆಳಗಿನ ಕಾರ್ಯ ಮುಗಿಸಿ, ಉಪಹಾರಕ್ಕೆ ಸಿದ್ದರಾದೆವು. ಅಕ್ಕಿಯಿಂದ ಮಾಡಿದ ಉಂಡೆ, ಚಟ್ನಿ ಮತ್ತು ಸಾಂಬಾರ ತುಂಬಾ ಚೆನ್ನಾಗಿಯೇ ಇತ್ತು.  ಮಡಿಕೇರಿ ಹೋದಾಗಲೂ ಇದೆ ರೀತಿಯ ಅಡುಗೆ ಇತ್ತು. ಮಧ್ಯಾನದ ಊಟಕ್ಕೆ ಪುಳಿಯೋಗರೆ ಅನ್ನ ಕಟ್ಟಿಕೊಂಡು ನೀರಿನ ಬಾಟಲ್ ಮತ್ತು ಕ್ಯಾಮೆರಾ ಹಿಡಿದುಕೊಂಡು ಸಿದ್ಧರಾದೆವು. ಅರಣ್ಯ ಅಧಿಕಾರಿಯಿಂದ ಪ್ರವೇಶ ಪರವಾನಿಗೆ ಪಡೆದು ನಮ್ಮ ಪಯಣಕ್ಕೆ ಸಿದ್ದರಾದೆವು. ಅಲ್ಲಿಯವರೆಗೂ ನನ್ನ ಕಾಲಿನ ಬಗ್ಗೆ ನನಗೆ ಕಿಂಚಿತ್ತು ಅನುಮಾನ ಇರಲಿಲ್ಲ.

ಇನ್ನೊಂದು ವಸತಿ ನಿಲಯ 

ಚಾರಣ ಶುರು ಆಗೋದೇ ಇಲ್ಲೇ 

ನಗರದಲ್ಲಿ ಜನರ ನಡುವೆ, ಇಲ್ಲಿ ಹಸುರಿನ ನಡುವೆ ಕಳೆದು ಹೋಗುವ ಮನಸ್ಸು 


 ಸೋಮಾರಿ ಕಟ್ಟೆ 

ತನ್ನೆಡೆಗೆ ಸೆಳೆಯುತ್ತಿರುವ ಪರ್ವತ ರಾಶಿ  
ದಣಿವಿನಲ್ಲಿ ನೀರೇ ಅಮೃತ 
ಹಿಂದೆ ಕೊನೆಯದಾಗಿ ಕಾಣುತ್ತಿರುವುದೇ ಕುದುರೆ ಮುಖ 

ಪಯಣವಿದು ಪರ್ವತದ ಎತ್ತರಕೆ 
ಹಾರುತ ಕುಣಿಯುತ ಹೋದ 
ಗೆಳೆಯರ ಹಿಂದೆ 
ಆಮೆಯಂತೆ ನಾನು 

ಮರಗಳ ಅಡಿಯಲಿ 
ನೆರಳಿನ ಸಂಜೀವಿನಿ 
ಸುತ್ತಲಿನ ಹಸುರು 
 ಮುದವನು ನೀಡಲು 

ಬಳಿಯಲಿ ಇದ್ದ 
ಮಾಯಾ ಪೆಟ್ಟಿಗೆ 
ನನ್ನ ಮರೆತು 
ನಿಸರ್ಗದ ಸನಿಹ ಹೋಗಲು 

ಹೃದಯದ ನೋವಿಗೆ 
ಪಟ್ಟಿಯ ಕಟ್ಟುತ 
ದೇಹಕೆ ಹೊಡೆದ ಇದು 
ನೋವಿನ  ಚಾರಣ 
ಕುದ್ರೆಮುಖ ಚಾರಣ.


 ನಾಟಕಗಾರ ಅನಿಲ 

ಕುದುರೆಮುಖದ ಅದ್ಭುತ ನೋಟ 

ಪಯಣ ಎಲ್ಲಿಗೆ ?
ಹತ್ತು  ಕಿ.ಮೀ ಇರೋ ಈ ದಾರಿ ಕಾಲಿನ ನೋವಿನಿಂದ ಸ್ವಲ್ಪ ಜಾಸ್ತಿನೆ ದೂರ ಅನ್ನಿಸತೊಡಗಿತ್ತು .   ಅರ್ಧ ದಾರಿ ತಲುಪುವರೆಗೆ ಚೆನ್ನಾಗಿದ್ದ ಕಾಲು, ಸ್ವಲ್ಪ ಜಾರಿದ ಪರಿಣಾಮ ದೂದ್ ಸಾಗರದಲ್ಲಿ ಆದ ನೋವಿಗೆ ಬಿಸಿ ತುಪ್ಪ ಸುರಿದಂತಿತ್ತು. ಹೇಗೋ ನೋವಿನಲ್ಲೇ ನಡೆದು ಮುಂದೆ ಸಾಗಿದರೆ ಮುಂದೆ ಕಾಲು ತಿರುಚಿಕೊಂಡ ನಂತರ ನಡೆಯಲು ಆಗೇ ಇಲ್ಲ.  ಆಮೆ ವೇಗದಲ್ಲಿ ಹೇಗೋ ಹತ್ತಿದೆ.  ಅನಿಲನ ವೇಗ, ಚೇತನನ ತ್ರಾಣ , ಆದರ್ಶನ  ಹಾಗೋ ಹೀಗೋ ಹತ್ತಿದ ಪ್ರಯತ್ನ, ಅಬ್ದುಲ್ಲನ ಮೊದಲ ಚಾರಣ, ಮತ್ತು ನನ್ನ ಆಮೆ ವೇಗ ಕುದ್ರೆಮುಖದ ವಿಶೇಷತೆ ಆಗಿತ್ತು .
ಆದರ್ಶ ದಿಕ್ಸೂಚಿ ಫಲಕದ ಜೊತೆ 

ಸ್ವರ್ಗದ ಬಾಗಿಲು  
ನನಗಂತೂ ಆ ಮೋಡಗಳು ದೇವ ಕನ್ಯೆ ಹಾಗೆ ಕಾಣಿಸುತ್ತಿವೆ.  

ಕುದ್ರೆಮುಖದ ಒಂದು ಭಂಗಿ 
 ಕುದುರೆಮುಖ ಪರ್ವತದ  ಹತ್ತಿರದಲ್ಲಿ ನೀರಿನ ಚಿಲುಮೆ ಸಿಕ್ಕಿದ್ದರಿಂದ ಅಲ್ಲೇ ಮಧ್ಯಾನದ ಊಟ ಮಾಡುವುದು  ಎಂದು ಎಲ್ಲರೂ ಕುಳಿತರು . ಹೊಟ್ಟೆ ತುಂಬಾ ಹಸಿವಿದ್ದರಿಂದ ಪುಳಿಯೋಗರೆ ಕಡಿಮೇನೆ ಆಗಿತ್ತು. ಹೊಟ್ಟೆಗೆ ಸ್ವಲ್ಪ ಬಿದ್ದ ನಂತರ ಉತ್ಸಾಹದಿಂದ ಮುಂದೆ ಸಾಗಿದೆವು.
ಇನ್ನೂ ಮುಂದೆ ಏನಿದೆ ? ಹುಲಿ ಬಂದರೆ !!!!

ಮಂಜಿನ ಮರೆಯಲ್ಲಿ 

 ದಟ್ಟ ಅಡವಿ ಕಾದಿದೆ ಮುಂದೆ !!
  ಇನ್ನೂ ಮುಂದೆ ಏನಿದೆ ಅನ್ನೋ ಪ್ರಶ್ನೆ ನಮ್ಮನ್ನು ಮುಂದೆ ದೃಷ್ಟಿ ಬೀರುವಂತೆ ಮಾಡಿತ್ತು. ಅರುಣ ಮತ್ತು ಅವನ ಗೆಳೆಯರು (ಉಳಿದ ಗುಂಪಿನ ಮಾರ್ಗದರ್ಶಕರು ) ಇನ್ನೂ ಊಟ ಮಾಡುತ್ತಾ ಹರಟೆ ಹೊಡೆಯುತ್ತಿದ್ದರು. ಅವರಿದ್ದರೇ ನಮಗೆ ಮುಂದೆ ಹೋಗುವ ಅವಕಾಶ ಸಿಗುತ್ತಿತ್ತೋ ಇಲ್ಲವೋ.  ಅಲ್ಲೇ  ಒಂದು ಘಂಟೆಗಿಂತ ಹೆಚ್ಚು ಕಾಲ ಕಳೆದು ಅಲ್ಲಿಂದ ಕಾಲು ಕಿತ್ತೆವು. ಎಲ್ಲರಿಗೂ ಸ್ವಲ್ಪ ದಣಿವಾದರೂ ಚೇತನ್ ಮಾತ್ರ ಹುರಿ  ಹುಮ್ಮಸ್ಸಲ್ಲಿ ಇದ್ದ. ಅನಿಲ ತಾನು ಕಡಿಮೆ ಇಲ್ಲ ಎಂಬಂತೆ ವೇಗವಾಗಿ ಮುಂದುವರೆಯುತ್ತಿದ್ದ. ಇನ್ನು ನಾನು ಅವರಿಗೆ ಮುಂದೆ ಹೋಗಲು ಹೇಳಿ ಹಗುರ ಕಾಲನ್ನು ತಳ್ಳುತ್ತ ಮುಂದುವರೆದೆ.



ಚಾರಣದ ಕೊನೆಯ ಮೈಲುಗಲ್ಲು 

ಮೇಲಿನಿಂದ ಕಂಡ ದೃಶ್ಯ 

ಚಾರಣಾರ್ತಿಗಳ ಸಾಲು ಇರುವೆಯ ಸಾಲಿನಂತೆ ಕಾಣಿಸುತ್ತಿತ್ತು 
ಅರುಣ ಕೂಡ ಪಾಪ ನನ್ನ ಜೊತೆ ನಿಧಾನವಾಗಿ ಸಾಗಿದ. ನನ್ನ ನಿಧಾನಗತಿ ಅವನಿಗೆ ಬೋರು ಹೊಡಿಸಿರಬೇಕು.   ಹಾಗೋ ಹೇಗೊ ನಾನು ವಾಪಾಸು ತಲುಪಿದಾಗ ಇನ್ನೊಂದು ಗುಂಪು ಅಲ್ಲಿ ಬಂದಿತ್ತು. ಬಾಸ್ಕ್ ಗುಂಪಿನ ಕಾರ್ತಿಕ್ ಕೂಡ ಅಲ್ಲಿದ್ದ. ಅವರು ನಮ್ಮೊಡನೆ ಬರುವವರಾಗಿದ್ದರು. ಆದರೆ ಅವರು ಬರುತ್ತಿದ್ದ ಐರಾವತ ಬಸ್ ಕೆಟ್ಟಿದ್ದರಿಂದ ಅವರು ಬರುವುದು ಸಾಯಂಕಾಲವಾಗಿತ್ತು. ನಾನೇನಾದರೂ ಅನಿಲನ ಮಾತು ಕೇಳಿ ಆ ಬಸ್ಸಲ್ಲಿ ಹೋಗಿದ್ದರೇ ನಮ್ಮೆಲ್ಲಾ ಯೋಜನೆ ಟುಸ್ಸಾಗುತ್ತಿತ್ತು.

ಈ ಹೂವು ಎಷ್ಟೋ ವರ್ಷಗಳಿಗೊಮ್ಮೆ ಸಿಗೋದು 
ಹಾಗೆ ಒಂದು ಸೆರೆ ಹಿಡಿದ ದೃಶ್ಯ  
 ಬಿಸಿ ಬಿಸಿ ಬಜ್ಜಿ ತಿಂದು ನಂತರ  ಬಿಸಿ ನೀರು ಸ್ನಾನ ಮಾಡಿ ಸ್ವಲ್ಪ ನಿರಾಳವಾಗಿ ಕುಳಿತು ಹರಟೆ ಹೊಡೆದಿದ್ದೆವು. ಒಳ್ಳೆ ಭೋಜನ ಕೂಡ ತಯಾರಾಗಿತ್ತು. ಚಪಾತಿ, ಪಲ್ಲೆ, ಅನ್ನ, ಮಜ್ಜಿಗೆ, ತರಕಾರಿ ಮತ್ತು ಕೋಳಿ ಸಾಂಬಾರ್ ಮಾಡಲಾಗಿತ್ತು .  ಹೊಟ್ಟೆ ತುಂಬಾ ತಿಂದದ್ದರಿಂದ ಜಾಸ್ತಿ ಹೊತ್ತು ಕುಳಿತುಕೊಳ್ಳದೆ ನಿದ್ದೆ ಮಾಡಲು ಅಣಿವಾದೆವು.  ಮಲಗಲು ಚಾರಣಕ್ಕೆ ಬಳಸುವ ಚಾಪೆ ನೀಡಲಾಗಿತ್ತು. ದಿಂಬು ಕೂಡ ಕೊಟ್ಟಿದ್ದರು. ನಾವು ಸ್ಲೀಪಿಂಗ್ ಬ್ಯಾಗ್  ತೆಗೆದುಕೊಂಡು ಹೋಗಿದ್ದರಿಂದ ಚಳಿಯ ಯೋಚನೆ ಇರಲಿಲ್ಲ. ಕಣ್ಣು ಮುಚ್ಚಿದಾಗ ಚಾರಣದ ಪ್ರತಿ ಪುಟಗಳು ಕಣ್ಣು ಮುಂದೆ ಬಂದಿದ್ದವು . ನಿಸರ್ಗವು ನನ್ನನ್ನು ಇಲ್ಲಿ ಕರೆಸಿದ್ದು ನನಗೆ ತುಂಬಾ ಖುಷಿ ನೀಡಿದ್ದಂತು ಹೌದು.  ನೋವಿನಲ್ಲಿ ಜಯಿಸಿದ ಚಾರಣ ಅನ್ನಬಹುದೇನೋ.

ಒಟ್ಟಿನಲ್ಲಿ ೨೦ ಕಿ.ಮೀ ಹಾದಿಯ ಕುದುರೆಮುಖ ಚಾರಣ ಬಗ್ಗೆ ಹೇಳ ಬೇಕಾದರೆ

ನಿನ್ನ ನೆನಪಿನ ಅಮಲಿನಲ್ಲಿ
ತೇಲಿ ಹೋಗಿರುವೆ
ಕನಸೋ ನನಸೋ ಅರಿಯದು
ನೀ ನನ್ನ ಕೈ ಹಿಡಿದು ಮುನ್ನಡೆಸುತ್ತಿರುವೆ

ಕಲ್ಲು ಮುಳ್ಳುಗಳ ರಹದಾರಿ
ಬೆಟ್ಟ ಗುಡ್ಡಗಳ ದಾಟಿ
ಹರಿಯುವ ಝರಿಗಳ
ಸದ್ಧನು ಹಿಂಬಾಲಿಸಿ

ಹುಲ್ಲು ಮುಳ್ಳುಗಳ ಸಾಂಗತ್ಯದಲಿ
ಬಿದಿರಿನ ತೋರಣದಲಿ
ನನ್ನ ಸ್ವಾಗತಿಸಲು  ಕರೆದಿರುವ
ಹಕ್ಕಿಗಳ ನಿನಾದದಲಿ

ದೇಹದ ನೋವಿಗೆ ಶಕ್ತಿಯ ನೀಡಿ
ಹೃದಯದ ಬಾವಕೆ ಮುದವನು ನೀಡಿ
ಸ್ವರ್ಗದ ಬಾಗಿಲತ್ತ ಕರೆಯುತ
ನೀ ನನ್ನ ಕೈ ಹಿಡಿದು ಮುನ್ನಡೆಸುತ್ತಿರುವೆ ।।೨।।


ಮುಂದುವರೆಯುವುದು ........ 
Previous
Next Post »